ಬೆಳಗಾವಿ: ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ಗ್ರಾಮದಲ್ಲಿ ಮೂರು ಮನೆಗಳು ಕುಸಿತವಾಗಿದ್ದು, ಮನೆಯಲ್ಲಿದ್ದ 13 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಓರ್ವ ಅಜ್ಜಿಗೆ ತೀವ್ರ ಗಾಯವಾದ ಹಿನ್ನೆಲೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈರಯ್ಯ ಪತ್ರಯ್ಯನವರ್, ಶಂಕ್ರಪ್ಪ, ಬಸವಣ್ಣಪ್ಪಗೆ ಸೇರಿದ ಮನೆಯ ಮನೆಯ ಮೇಲ್ಛಾವಣಿ ಏಕಾಏಕಿ ಕುಸಿದ ಹಿನ್ನೆಲೆ ದುರಂತ ಸಂಭವಿಸಿದೆ. ಸ್ಥಳಕ್ಕೆ ಬೈಲಹೊಂಗಲ ಎಸಿ, ಇಓ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೊಡವಾಡ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಗ್ರಾಮದಲ್ಲಿ ಐದು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. 200ಮಿಮೀ, 205ಮಿಮೀ, 235ಮಿಮೀನಷ್ಟು ಮಳೆಯಾಗಿದೆ. ಇದರಿಂದ ಮಲಪ್ರಭಾ ನದಿಯ ಒಳ ಹರಿವು ಹೆಚ್ಚಾಗಿದೆ. ಇನ್ನ ಭಾರಿ ಮಳೆಗೆ ರಸ್ತೆ ಮತ್ತು ಬ್ರಿಡ್ಜ್ ಕೊಚ್ಚಿ ಹೋಗುತ್ತಿವೆ. ಕಣಕುಂಬಿ – ಚಿಗಳೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಕುಸಿಯುತ್ತಿದ್ದು, ಚಿಗಳೆ, ಮಾನ್ ಸೇರಿ ಮೂರು ಗ್ರಾಮಗಳ ಸಂಪರ್ಕ ಬಂದ್ ಆಗುವ ಆತಂಕ ಎದುರಾಗಿದೆ.
ವೇದಗಂಗಾ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನಿಪ್ಪಾಣಿ ತಾಲೂಕಿನ ಅಕ್ಕೋಳ ಸಿದ್ನಾಳ ಸೇತುವೆ ಜಲಾವೃತಗೊಂಡಿದೆ. ಸೇತುವೆ ಬಳಿ ಬ್ಯಾರಿಕೇಡ್ ಹಾಕಿ ಪೊಲೀಸರನ್ನು ನಿಯೋಜಿಸಲಾಗಿದೆ. ಜನರು ಪರ್ಯಾಯ ಮಾರ್ಗದ ಮೂಲಕ ಓಡಾಡುತ್ತಿದ್ದಾರೆ. ಈ ನಡುವೆ ರೈತರು ವೇದಗಂಗಾ ನದಿಗೆ ಬಾಗಿನ ಅರ್ಪಿಸಿ ನಮಿಸಿದ್ದಾರೆ.