ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2023ಕ್ಕೆ ದಿನಗಣನೆ ಶುರುವಾಗಿದೆ. ಅರಮನೆಯಲ್ಲಿ ದಸರಾ ಪರಂಪರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅ.9 ರಂದು ರತ್ನ ಖಚಿತ ಸಿಂಹಾಸನ ಜೋಡಣೆ ಆಗಲಿದೆ. ಬೆಳಗ್ಗೆ 7 ಗಂಟೆಗೆ ನವಗ್ರಹ ಹೋಮ ಸೇರಿ ಹಲವು ಪೂಜಾ ವಿಧಿ ವಿಧಾನಗಳು ನಡೆಯಲಿದೆ. ಬಳಿಕ ಬೆಳಗ್ಗೆ 10:05 ರಿಂದ 10:35ರ ಶುಭ ಲಗ್ನದಲ್ಲಿ ಸಿಂಹಾಸನ ಜೋಡಣೆ ಆಗಲಿದೆ. ಬಳಿಕ ಗೋಶಾಲೆಗೆ ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸು ಆಗಮಿಸಲಿವೆ.
ಅ.15 ರಂದು 6 ಗಂಟೆಯಿಂದ 6:25ರ ವರೆಗೆ ಶುಭ ಮುಹೂರ್ತದಲ್ಲಿ ಸಿಂಹ ಜೋಡಣೆ ಮಾಡಲಾಗುತ್ತದೆ. ಬೆಳಗ್ಗೆ 07:05 ರಿಂದ 7:45ರ ಶುಭ ಲಗ್ನದಲ್ಲಿ ಕಂಕಣ ಧಾರಣೆ ನಡೆಯಲಿದೆ. ಈ ವೇಳೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಅವರ ಪತ್ನಿ ತ್ರಿಷಿಕಾ ಕುಮಾರಿಗೆ ಕಂಕಣ ಧಾರಣೆ ನಡೆಯಲಿದೆ.
ಬಳಿಕ 9:45ಕ್ಕೆ ಅರಮನೆ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಪಟ್ಟದ ಹಸು ಆಗಮಿಸಲಿವೆ. ಬೆಳಗ್ಗೆ 10:15ಕ್ಕೆ ಕಳಸ ಪೂಜೆ ಹಾಗೂ ಸಿಂಹಾಸನ ಪೂಜೆ ನೆರವೇರಲಿದೆ. ಇದಾದ ಬಳಿಕ ಬೆಳಗ್ಗೆ 11:30ರಿಂದ 11:50ಕ್ಕೆ ಖಾಸಗಿ ದರ್ಬಾರ್ ನಡೆಯಲಿದೆ. ಅಂದು ಮಧ್ಯಾಹ್ನ 1:45 ರಿಂದ 02:05ರ ಅವಧಿಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ರವಾನೆ ಮಾಡಲಾಗುತ್ತದೆ.
ಅ.20 ರಂದು 10:05 ರಿಂದ 10:25ಕ್ಕೆ ಸರಸ್ವತಿ ಪೂಜೆ, ಅ.21 ರಂದು ಕಾಳರಾತ್ರಿ ಪೂಜೆ, ಅ.22 ರಂದು ದುರ್ಗಾಷ್ಠಮಿ ಪೂಜೆ, ಅ.23 ರಂದು ದುರ್ಗಾಷ್ಠಮಿ ಪೂಜೆ ನಡೆಯಲಿದೆ. ಅದೇ ದಿನ ಬೆಳಗ್ಗೆ 5:30ಕ್ಕೆ ಚಂಡಿಹೋಮದೊಂದಿಗೆ ಪೂಜೆ ಆರಂಭವಾಗಲಿದೆ. ಆ ಸಮಯದಲ್ಲಿ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸು ಆಗಮಿಸಲಿವೆ.
ಬಳಿಕ ಬೆಳಗ್ಗೆ 6:05 ರಿಂದ 06:15ಕ್ಕೆ ಖಾಸಾ ಆಯುಧಗಳು ಅರಮನೆ ಕೋಡಿ ಸೋಮೇಶ್ವರ ದೇಗುಲಕ್ಕೆ ರವಾನೆ ಆಗಲಿವೆ. ಬೆಳಗ್ಗೆ 07:15ಕ್ಕೆ ಖಾಸಾ ಆಯುಧಗಳು ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆಗೆ ವಾಪಸ್ ತರಲಾಗುತ್ತದೆ. ಬೆಳಗ್ಗೆ 9:30ಕ್ಕೆ ಚಂಡಿಹೋಮ ಪೂರ್ಣಾಹುತಿ ನಡೆಯಲಿದೆ. ಬೆಳಗ್ಗೆ 11:45ಕ್ಕೆ ಕಲ್ಯಾಣ ಮಂಟಪಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸು ಬರಲಿವೆ. ಬಳಿಕ ಮಧ್ಯಾಹ್ನ 12:20ಕ್ಕೆ ಆಯುಧಪೂಜೆ ಆರಂಭವಾಗಲಿದೆ. ಈ ವೇಳೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಆಯುಧಗಳಿಗೆ ಪೂಜೆ ನಡೆಯಲಿದೆ.
ಬಳಿಕ ಸಂಜೆ ಖಾಸಗಿ ದರ್ಬಾರ್ ಇರಲಿದೆ. ನಂತರ ಸಿಂಹ ವಿಸರ್ಜನೆ, ವಾಣಿ ವಿಲಾಸ ದೇವರ ಮನೆಯಲ್ಲಿ ಕಂಕಣ ವಿಸರ್ಜನೆ ಆಗಲಿದೆ. ಅಂಬಾವಿಲಾಸದಲ್ಲಿ ದಪ್ತಾರ್ ಪೂಜೆ ಮಾಡಿ, ಮಹಾಸನ್ನಿಧಾನದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅಮಲದೇವಿ ದರ್ಶನ ಪಡೆಯಲಿದ್ದಾರೆ.
ಅ.24 ರಂದು ವಿಜಯದಶಮಿ ಆಚರಣೆ ನಡೆಯಲಿದೆ. ಬೆಳಗ್ಗೆ 9:45ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಪಟ್ಟದ ಹಸು ಆಗಮಿಸಲಿವೆ. ಬೆಳಗ್ಗೆ 11 ರಿಂದ 11:40ರ ವೇಳೆಗೆ ವಿಜಯದಶಮಿ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆ ಅರಮನೆ ಆನೆ ಬಾಗಿಲಿನಿಂದ ಅರಮನೆ ಭುವನೇಶ್ವರಿ ದೇಗುಲದವರೆಗೂ ನಡೆಯಲಿದೆ. ಬಳಿಕ ಭುವನೇಶ್ವರಿ ದೇಗುಲದಲ್ಲಿ ಶಮಿ ಪೂಜೆಯನ್ನು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನೆರವೇರಿಸಲಿದ್ದಾರೆ.