ವಿಶ್ವ ಗುರು ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಸಮಾಜಕ್ಕೆ ತಿಳಿಸಬೇಕಾಗಿದೆ. 12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಜಾತಿರಹಿತ ಲಿಂಗಾಯತ ಧರ್ಮವನ್ನು ಸ್ಥಾಪಿಸಿ ಸ್ತ್ರೀಸಮಾನತೆ, ವೃತ್ತಿ ಸಮಾನತೆಯೊಂದಿಗೆ ವಚನ ಸಾಹಿತ್ಯದ ಮುಖಾಂತರ ಸಾತ್ವಿಕ ಸಮಾಜವನ್ನು ಕಟ್ಟಿ ಬೆಳೆಸಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಜಾ.ಲಿಂ ಮಹಾಸಭಾದ ಅಧ್ಯಕ್ಷರಾದ ಶರಣ ಬಸವರಾಜ ರೊಟ್ಟಿ ಹೇಳಿದರು.
ರವಿವಾರ ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಕಚೇರಿಯಲ್ಲಿ ನಡೆದ ಜಿಲ್ಲಾ ಯುವ ಘಟಕದ ಸದಸ್ಯರ ಸಭೆಯಲ್ಲಿ ಯುವ ಘಟಕದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ಈಗ ಧರ್ಮ ಜಾಗೃತಿಯ ಅವಶ್ಯಕತೆ ಅಧಿಕವಾಗಿದೆ. ಲಿಂಗಾಯತ ಧರ್ಮದ ಕಾಯಕ ಪಂಗಡಗಳಲ್ಲಿ ಏಕತೆಯನ್ನು ತರಬೇಕಾಗಿದೆ.
ಲಿಂಗಾಯತರ ಏಕೀಕರಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದ್ದು. ಜಾಗತಿಕ ಲಿಂಗಾಯತ ಮಹಾಸಭಾದ ಉದ್ದೇಶಗಳನ್ನು ಹಾಗೂ ಧರ್ಮ ಜಾಗೃತಿಯನ್ನು ಯುವ ಘಟಕದ ಸದಸ್ಯರು ಮಾಡಬೇಕು ಎಂದು ಹೇಳಿದರು.
ಪ್ರಾರಂಭದಲ್ಲಿ ಯುವ ಘಟಕದ ಸಂಚಾಲಕರಾದ ಪ್ರೇಮ ಚೌಗಲಾ ಯುವ ಸದಸ್ಯರನ್ನು ಪರಿಚಯಿಸಿ ಸ್ವಾಗತಿಸಿದರು. ಜಾಲಿಂ ಮಹಾಸಭಾದ ಮಹಾನಗರ ಪ್ರಧಾನ ಕಾರ್ಯದರ್ಶಿ ಸಿ ಎಂ ಬೂದಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರಿಯ ಶರಣರಾದ ಮೋಹನ ಗುಂಡ್ಲೂರ, ಮುರೆಗೆಪ್ಪ ಬಾಳಿ, ಶಂಕರ ಕುಂದ್ರಾಳ ‘ಶರಣ ಚಿಕ್ಕಲಿ, ಫಕೀರಪ್ಪ ಸೋಮನ್ನವರ ಹಾಗೂ ಬೇರೆ ಬೇರೆ ತಾಲೂಕಿನಿಂದ ಬಂದ ಯುವ ಸದಸ್ಯರು ಉಪಸ್ತಿತರಿದ್ದರು. ಮಲ್ಲಿಕಾರ್ಜುನ ತಿಮ್ಮವ್ವಗೋಳ ಅವರಿಂದ ಶರಣು ಸಮರ್ಪಣೆ ಜರುಗಿತು.