ಬೆಂಗಳೂರು: ಈ ಬಾರಿ ಮಳೆಯ ಅಬ್ಬರದಂತೆಯೇ ಉತ್ತರ ಕರ್ನಾಟಕ ಭಾಗದಲ್ಲಿ ಮೈಕೊರೆಯುವ ಚಳಿಗೆ ಜನರು ತತ್ತರಿಸಲಿದ್ದಾರೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಹವಾಮಾನ ಮುನ್ಸೂಚನಾ ಕೇಂದ್ರದ ಡಾ.ಆರ್.ಹೆಚ್.ಪಾಟೀಲ್ ಈ ಬಾರಿ ಚಳಿ ಬಗ್ಗೆ ಮುನ್ಸೂಚನೆ ನೀಡಿದ್ದು, ರಾಜ್ಯದಲ್ಲಿ ಚಳಿ ಡಿಸೆಂಬರ್ ಮೂರನೇ ವಾರದ ಬಳಿಕ ಹೆಚ್ಚಾಗಬೇಕಿತ್ತು.
ಆದರೆ ಈ ಬಾರಿ ನವೆಂಬರ್ ಆರಂಭದಿಂದಲೇ ಶುರುವಾಗಿದೆ. ನವೆಂಬರ್ 24ರ ಬಳಿಕ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಚಳಿ ಇನ್ನಷ್ಟು ಹೆಚ್ಚಾಗಲಿದ್ದು, ಜನರನ್ನು ನಡುಗಿಸಲಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಹುಬ್ಬಳ್ಳಿ-ಧಾರವಾಡ, ಗದಗ, ರಾಯಚೂರು, ಕೊಪ್ಪಳ, ಬೆಳಗಾವಿ ಸೇರಿದಂತೆ ಹಲವೆಡೆಗಳಲ್ಲಿ ಮೈ ಕೊರೆಯುವ ಚಳಿಗೆ ಜನರು ಬೆಳಿಗ್ಗೆ 10 ಗಂಟೆಯಾದರೂ ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ನವೆಂಬರ್ 24ರ ಬಳಿಕ ಆರಂಭವಾಗಲಿರುವ ಚಳಿ ಜನರ ಇನ್ನಿಲ್ಲದಂತೆ ಕಾಡಲಿದೆ ಎಂದು ಹೇಳಲಾಗುತ್ತಿದೆ.