ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಬಿ. ದಯಾನಂದ ಅವರನ್ನು ನೇಮಕ ಮಾಡಲಾಗಿದೆ. ಈಗಿದ್ದ ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರನ್ನು ಆಂತರಿಕ ಭದ್ರತೆ ಡಿಜಿಪಿಯಾಗಿ ವರ್ಗಾವಣೆ ರಾಜ್ಯ ಸರ್ಕಾರ ಆದೇಶಿಸಿದೆ. ಇನ್ನು ಬೆಂಗಳೂರು ನಗರದ ‘ವಿಶೇಷ ಕಮಿಷನರ್’ (ಸಂಚಾರ) ಎಂಎ ಸಲೀಂ ಅವರನ್ನು ಸಿಐಡಿ ಡಿಜಿಯಾಗಿ ವರ್ಗಾವಣೆ ಮಾಡಲಾಗಿದೆ.
ವರ್ಷದ ಹಿಂದೆಯಷ್ಟೇ (2022) ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದ ಪ್ರತಾಪ್ ರೆಡ್ಡಿ ಅವರಿಗೆ ಈ ವರ್ಷದ(2023) ಆರಂಭದಲ್ಲಿ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಬಡ್ತಿ ನೀಡಿ ಅಲ್ಲಿಯೇ ಮುಂದುವರೆಸಲಾಗಿತ್ತು. ಆದ್ರೆ, ಇದೀಗ ಪ್ರತಾಪ್ ರೆಡ್ಡಿ ಅವರನ್ನು ಆಂತರಿಕ ಭದ್ರತೆ ಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಇನ್ನು ಇವರ ಸ್ಥಾನಕ್ಕೆ 1994 ರ ಬ್ಯಾಚ್ನ ಐಪಿಎಸ್ ಅಧಿಕಾರಿ ಬಿ ದಯಾನಂದ್ ಅವರನ್ನು ನೇಮಕ ಮಾಡಲಾಗಿದೆ.
ದಯಾನಂದ ಈ ಹಿಂದೆ ಬೆಂಗಳೂರಿನಲ್ಲಿ ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ) ಆಗಿ ಸೇವೆ ಸಲ್ಲಿಸಿದ್ದರು. ಸದ್ಯ ಗುಪ್ತಚರ ಇಲಾಖೆ ಎಡಿಜಿಪಿ ಆಗಿ ಕೆಲಸ ನಿರ್ವಹಿಸುತ್ತಿರುವ ಬಿ.ದಯಾನಂದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲದವರಾಗಿದ್ದಾರೆ.