Ad imageAd image

ದರ್ಶನ್​ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ; ಆರೋಪಿಗಳ ಮನವಿ ತಿರಸ್ಕಾರ

ratnakar
ದರ್ಶನ್​ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ; ಆರೋಪಿಗಳ ಮನವಿ ತಿರಸ್ಕಾರ
WhatsApp Group Join Now
Telegram Group Join Now

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ನ್ಯಾಯಾಂಗ ಬಂಧನ ಎದುರಿಸುತ್ತಿದೆ. ಅವರ ನ್ಯಾಯಾಂಗ ಅವಧಿ ಇಂದಿಗೆ (ಆಗಸ್ಟ್ 28) ಅಂತ್ಯಗೊಳ್ಳುವುದರಲ್ಲಿತ್ತು. ಹೀಗಾಗಿ 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗಿದೆ. ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಸೆಪ್ಟೆಂಬರ್ 9ರವರೆಗೆ ವಿಸ್ತರಿಸಿ ಕೋರ್ಟ್ ಆದೇಶ ನೀಡಿದೆ.

ನ್ಯಾಯಾಧೀಶರು ಆರಂಭದಲ್ಲಿ ಎಲ್ಲರ ಹಾಜರಾತಿ ಪಡೆದರು. ಆ ಬಳಿಕ ಎಲ್ಲಾ ಆರೋಪಿಗಳಿಗೂ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಜೈಲಲ್ಲಿ ಸಿಗರೇಟ್ ಸೇದಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ದರ್ಶನ್ ಅವರು ಪೊಲೀಸರು ವಿಚಾರಣೆ ಎದುರಿಸಲಿದ್ದಾರೆ. ಆ ಬಳಿಕ ಅವರನ್ನು ಬಳ್ಳಾರಿಗೆ ಶಿಫ್ಟ್ ಮಾಡಲಾಗುತ್ತದೆ.

ಪ್ರಕರಣದ ಆರೋಪಿ ಪ್ರದೂಶ್ ಅವರನ್ನು ಬೆಳಗಾವಿ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ. ಇದನ್ನು ಮಾಡದಂತೆ ಅವರು ಕೊರಿದ್ದಾರೆ. ‘ನನ್ನ ತಂದೆಗೆ ಕ್ಯಾನ್ಸರ್ ಇದೆ. ತಂದೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಲಾಯರ್ ಭೇಟಿಗೂ ಅವಕಾಶ ನೀಡುತ್ತಿಲ್ಲ. ಹೀಗಾಗಿ ತಮ್ಮನ್ನು ಬೇರೆ ಕಡೆಗೆ ಶಿಫ್ಟ್ ಮಾಡಬೇಡಿ’ ಎಂದು ಪ್ರದೂಶ್ ಕೇಳಿಕೊಂಡಿದ್ದಾರೆ. ಆದರೆ, ಈ ಮನವಿಯನ್ನು ಜಡ್ಜ್ ತಿರಸ್ಕರಿಸಿದ್ದಾರೆ. ‘ಕಾನೂನಿನ ಪ್ರಕಾರ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಾರೆ’ ಎಂದು ಜಡ್ಜ್​ ಹೇಳಿದ್ದಾರೆ.

ಸದ್ಯ ನ್ಯಾಯಾಂಗ ಬಂಧನ ವಿಸ್ತರಣೆಗೆ ನ್ಯಾಯಾಲಯಕ್ಕೆ ಪೊಲೀಸರು ಎಂಟು ಅಂಶಗಳ ಕಾರಣ ನೀಡಿದ್ದಾರೆ. ದರ್ಶನ್ ಅವರು ಮೃತನ ಕುಟುಂಬಕ್ಕೆ ಬೆದರಿಕೆ ಹಾಕಬಹುದು ಎಂದು ಪೊಲೀಸರು ಆತಂಕ ಹೊರಹಾಕಿದ್ದಾರೆ. ಈ ಕಾರಣಕ್ಕೆ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ ಮಾಡಲಾಗಿದೆ.

ಪ್ರದೋಶ್ ಆರೋಪಕ್ಕೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.  ‘ಹೊಸದಾಗಿ ಮೂರು ಕೇಸ್ ದಾಖಲಾಗಿ ತನಿಖೆ ನಡೆಯುತ್ತಿದೆ. ಈ ಕಾರಣದಿಂದ ಯಾರನ್ನೂ ಭೇಟಿ ಮಾಡಲು ಅವಕಾಶ ನೀಡಿಲ್ಲ. ಮುಂದೆ ನೀಡಲಾಗುತ್ತದೆ’ ಎಂದು ಜೈಲು ಅಧಿಕಾರಿಗಳು ಕೋರ್ಟ್ ಎದುರು ಮಾಹಿತಿ ನೀಡಿದ್ದಾರೆ.

WhatsApp Group Join Now
Telegram Group Join Now
Share This Article